-->

ಕಂಚರಸನ ತುರಮರಿಯ ಶಾಸನ

MadhuNews | Thursday, May 22, 2025



ತುರಮರಿಯು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಮಲಪ್ರಭಾ ನದಿಯ ದಕ್ಷಿಣ ತಟದಲ್ಲಿರುವ ಒಂದು ಹಳ್ಳಿ. ಬೈಲಹೊಂಗಲದಿಂದ ನೇರಕ್ಕೆ ೯ ಮೈಲುಗಳು ಮತ್ತು ಬೆಳಗಾವಿಯಿಂದ ೨೬ ಮೈಲುಗಳ ಅಂತರದಲ್ಲಿದೆ. ಊರು ಚಿಕ್ಕಬೆಟ್ಟವೊಂದರ ಉತ್ತರ ಮತ್ತು ಪೂರ್ವ ಪಾರ್ಶ್ವಗಳಲ್ಲಿ ಹಬ್ಬಿದ್ದು ಇದೇ ಗುಡ್ಡದ ದಕ್ಷಿಣ ತುದಿಗಿರುವ ಬಹುಕಡಿದಾದ ಶಿಖರದ ಮೇಲೆ ಬಸವಣ್ಣನ ಗುಡಿಯಿದೆ. ಅದರ ಪಕ್ಕದಲ್ಲಿ ಪ್ರಸ್ತುತ ಶಾಸನವಿರುವ ಹಾಸುಗಲ್ಲು ಬಿದ್ದುಕೊಂಡಿವೆ. ೪೫” ಉದ್ದ ಮತ್ತು ೩೫” ಅಗಲ ಇದ್ದು ಬಲಗಡೆ ಮೇಲ್ಭಾಗದಲ್ಲಿ ಸೀಳಿ ತುಂಡಾಗಿರುವುದರಿಂದ ಮೊದಲಿನ ಒಂಬತ್ತು ಸಾಲುಗಳ ಕೆಲವು ಅಕ್ಷರಗಳು ಲೋಪಗೊಂಡಿವೆ. ಆ ತುಂಡುಗಲ್ಲೂ ಅಲ್ಲಿಯೆ ಬಿದ್ದಿದೆ. ಇಷ್ಟಲ್ಲದೆ ಕಲ್ಲಿನ ಕೆಳಭಾಗದಲ್ಲಿ ನಟ್ಟ ನಡುವೆ ಸು. ೭” ವ್ಯಾಸದ ತೂತು ಕೊರೆಯಲ್ಪಟ್ಟಿರುವುದರಿಂದ ನಾಲ್ಕು ಸಾಲುಗಳ ಪಾಠ ಮಧ್ಯದಲ್ಲಿ ಪೂರ್ಣ ಲೋಪಗೊಂಡಿದೆ. ಒಟ್ಟು ಶಾಸನವು ಹಲವು ಸ್ಥಳಗಳಲ್ಲಿ ಸವೆದು ಹೋಗಿರುವುದರಿಂದ ಅಲ್ಲಲ್ಲಿ ಕೆಲವು ಅಕ್ಷರಗಳು ಲೋಪಿಸಿವೆ.


ಪ್ರಸ್ತುತ ಶಾಸನವು ಮೂಲತಃ ಬಸವಣ್ಣನ ಗುಡಿಯದಲ್ಲವೆಂತಲೂ ಬೇರೆಡೆಯಿಂದ ಈಗಿನ ಸ್ಥಳಕ್ಕೆ ಸಾಗಿಸಿದ್ದೆಂತಲೂ ತಿಳಿದುಬರುತ್ತದೆ. ಆದರೆ ಎಲ್ಲಿಂದ ಸಾಗಿಸಿದ್ದು ಎಂಬ ವಿಷಯದಲ್ಲಿ ಊರವರಿಂದ ಖಚಿತವಾದ ವಿವರಗಳು ದೊರೆಯುತ್ತಿಲ್ಲ. ಶಾಸನದಲ್ಲಿ ತುರಮರಿಗ್ರಾಮದ ಉಲ್ಲೇಖವಿಲ್ಲ. ಅದರ ಬದಲು ‘ಪಟ್ಟದ ಕುಱುಗುಂದ’ ಎಂಬ ಊರ ಉಲ್ಲೇಖವಿದೆ. ಮಲಪ್ರಭಾನದಿಯ ಉತ್ತರತಟದಲ್ಲಿ, ತುರುಮರಿಯಿಂದ ಒಂದು ಮೈಲು ಅಂತರದಲ್ಲಿ ಈಗ ‘ಕುರುಗುಂದ’ ಎಂಬ ಹಳ್ಳಿಯಿದೆ. ಶಾಸನವು ಮೂಲದಲ್ಲಿ ಈ ಕುರುಗುಂದವೆಂಬ ಊರಿನದಾಗಿರಲೂ ಬಹುದು.


ಶಾಸನದ ಅಕ್ಷರಗಳ ಪ್ರಮಾಣ ೩/೪” x ೧” ನಷ್ಟು ಇದ್ದು, ೧೦-೧೧ನೆಯ ಶತಮಾನದ್ದಾಗಿದೆ. ಪ್ರಾರಂಭದಲ್ಲಿ ಹಳಗನ್ನಡ ಗದ್ಯವಿದ್ದು ಅದರ ಕೊನೆಯಲ್ಲಿ ಸಂಸ್ಕೃತ ಪದ್ಯಗಳ ಫಲಶ್ರುತಿಯಿದೆ. ಅದಾದಮೇಲೆ ಕನ್ನಡ ಕಂದಪದ್ಯಗಳಿವೆ. ತೀರಕೊನೆಯಲ್ಲಿ ಕವಿ ಮತ್ತು ಕಂಡರಣೆಕಾರರ ಹೆಸರುಗಳಿವೆ. ಶಾಸನದಲ್ಲಿ ಮಿತಿಯ ಉಲ್ಲೇಖವು ಸ್ಪಷ್ಟವಿದ್ದು ಕ್ರಿ.ಶ. ೧೦೫೧ ಕ್ಕೆ ಸೇರಿಹೋಗುವ ೯೭೩ನೆಯ ಖರ ಸಂವತ್ಸರವೆಂದು ಸ್ಪಷ್ಟಪಡಿಸಲಾಗಿದೆ. ಇದು ಕಲ್ಯಾಣ ಚಾಳುಕ್ಯದೊರೆ ಆಹವಮಲ್ಲ ಎಂದರೆ ೧ನೆಯ ಸೋಮೇಶ್ವರನ ಆಳ್ವಿಕೆಗೆ ಸೇರಿದ್ದಾಗಿದೆ.


ಈ ಶಾಸನದಿಂದ ಮೊದಲಬಾರಿಗೆ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ. ರಾಷ್ಟ್ರಕೂಟ ಒಂದನೆಯ ಅಮೋಘವರ್ಷನ ಸಾಮಂತನಾಗಿದ್ದ (?) ಗಂಗದೊರೆ ಸೈಗೊಟ್ಟ ಶಿವಮಾರನು ಶಕವರ್ಷ ೨೬೧ ರಲ್ಲಿ[1] ಕುಮ್ಮುದವಾಡದ ಜೈನಬಸದಿಗೆ ಕೊಟ್ಟಿದ್ದ ದತ್ತಿಯನ್ನು ಗಂಗದೊರೆ ಕಂಚರಸನು ಪುನರ್ದತ್ತಿಯಾಗಿತ್ತು. ಉದ್ಧರಿಸಿದ ನೆಂದು ಕಲಭಾವಿ ಶಾಸನದಲ್ಲಿ ಹೇಳಿದೆ.[2] ಎಂದರೆ ಕಲಭಾವಿಶಾಸನದಲ್ಲಿ ಕಂಚರಸನು ದತ್ತಿಕೊಟ್ಟ ಕಾಲವನ್ನು ನಮೂದಿಸದೆ ಸೈಗೊಟ್ಟ ಶಿವಮಾರನ ದತ್ತಿಕೊಟ್ಟ ಕಾಲವನ್ನು ಮಾತ್ರ ಹೇಳಿದೆ. ಫೀಟರು ಶಾಸನದ ಲಿಪಿಯನ್ನು ಗಮನಿಸಿ ಅದರ ಕಾಲ ಸು. ೧೧ನೆಯ ಶತಮಾನವೆಂದು ಹೇಳಿದ್ದರು. ಪ್ರಸ್ತುತ ತುರಮರಿಯ ಶಾಸನವು ಕ್ರಿ.ಶ. ೧೦೫೧ ರಲ್ಲಿ ಕಾದಲವಳ್ಳಿ ಮೂವತ್ತನ್ನು ಕಂಚರಸನು ಮನ್ನೆಯ ಸ್ವಾಮ್ಯದಿಂದ ಆಳುತ್ತಿದ್ದನೆಂದು ಸ್ಪಷ್ಟವಾಗಿ ಉಲ್ಲೇಖಿಸುವುದರಿಂದ ಫ್ಲೀಟರ ಊಹೆಗೆ ಖಚಿತತೆ ಬಂದಂತಾಗಿದೆ. ಕಂಚರನಿಗೆ ನಂದಗಿರಿನಾಥ, ಕೊಂಗುಣಿವರ್ಮ ಧರ್ಮ ಮಹಾರಾಜ, ಸಮದಕರಿಲಾಂಛನ ಎಂಬ ಬಿರುದುಗಳನ್ನು ಕೊಟ್ಟಿರುವುದರಿಂದ ಕಲಭಾವಿ ಶಾಸನದ ಗಂಗದೊರೆ ಕಂಚರಸನೇ ಈತ ಎಂಬುದು ಸ್ಪಷ್ಟ. ಒಟ್ಟಿನಲ್ಲಿ ಕಂಚರಸನನ್ನು ಉಲ್ಲೇಖಿಸುವ ಈವರೆಗಿನ ಪ್ರಕಟಿತ ಶಾಸನಗಳಲ್ಲಿ ಇದು ಎರಡನೆಯದು. ಮತ್ತು ಆತನ ಕಾಲದ ಬಗೆಗೆ ಖಚಿತ ಆಧಾರ ನೀಡುವಂಥದು.
ದಕ್ಷಿಣದಲ್ಲಿ ಚೋಳರ ದಾಳಿಯಿಂದಾಗಿ ತಲಕಾಡಿನ ಗಂಗಮನೆತನ ನಷ್ಟವಾಯಿತಷ್ಟೆ, ಆ ಸಂದರ್ಭದಲ್ಲಿ ಕಲ್ಯಾಣದ ಚಾಳುಕ್ಯರು ಗಂಗರನ್ನು ಪುನರುದ್ಧರಿಸಬೇಕೆಂಬ ಮನೀಷೆಯಿಂದ ಕಂಚರಸನನ್ನು ಉತ್ತರದ ಈ ಭಾಗದಲ್ಲಿ ತಂದು ಪ್ರತಿಷ್ಠಿಸಿರಬೇಕು. ಈ ಪ್ರತಿಷ್ಠಾಪನೆ ಹತ್ತನೆಯ ಶತಮಾನದ ಕೊನೆ ಅಥವಾ ಹನ್ನೊಂದನೆಯ ಶತಕದ ಆದಿಯಲ್ಲಿ ಜರುಗಿರಬೇಕು. ಕಾದಲವಳ್ಳಿ ಮೂವತ್ತನ್ನು ಕ್ರಿ.ಶ. ೧೦೭೫ ರಲ್ಲಿ ಚಾಲುಕ್ಯ ಭುವನೈಕಮಲ್ಲ ಎರಡನೆಯ ಸೋಮೇಶ್ವರನ ದಂಡನಾಯಕ ಸೋಮೇಶ್ವರ ಭಟ್ಟನು ಆಳುತ್ತಿದ್ದುದಾಗಿ ಕಾದರವಳ್ಳಿಯ ಶಾಸನವೊಂದರಿಂದ[3] ತಿಳಿಯುವುದರಿಂದ ಮತ್ತು ಅದರಲ್ಲಿ ಕಂಚರಸನ ಉಲ್ಲೇಖವಿಲ್ಲದಿರುವುದರಿಂದ ಈ ಇಪ್ಪತ್ತೈದು ವರ್ಷಗಳಲ್ಲಿ ಈ ಗಂಗಮನೆತನವೂ ನಷ್ಟಗೊಂಡಿತ್ತೆಂದು ಊಹಿಸಬಹುದು; ಆ ಪ್ರದೇಶವು ಗೋವೆಯ ಕದಂಬರ ಕೈಗೆ ಇನ್ನೂ ಬಂದಿರಲಿಲ್ಲವೆಂದೂ ತಿಳಿಯಬಹುದು.


ಕಂಚರಸನ ಜೊತೆಗೆ ರಾಷ್ಟ್ರಕೂಟ ಭೀಮದೇವನೆಂಬುವನನ್ನು ಶಾಸನವು ಉಲ್ಲೇಖಿಸುತ್ತದೆ. ಈತನ ಇತಿವೃತ್ತಗಳಾವವೂ ಶಾಸನದಲ್ಲಿ ಇಲ್ಲ. ಈ ಭೀಮದೇವನ ಪುರದವಳೆಂದು ಶಾಸನ ಹೇಳುವಂತೆ ತೋರುತ್ತದೆ. ಆದರೆ ಶಾಸನದ ಆ ಭಾಗಸ್ಪಷ್ಟವಿಲ್ಲ. ಅಂತೂ ೧೧ನೆಯ ಶತಮಾನದ ಮಧ್ಯದಲ್ಲಿ ಕಾದರವಳ್ಳಿಯ ಪ್ರದೇಶದಲ್ಲಿ ರಾಷ್ಟ್ರಕೂಟರ ವಂಶಸ್ಥರು ನೆಲೆಸಿದ್ದರೆಂಬುದು ಈ ಶಾಸನದಿಂದ ಪ್ರಥಮಬಾರಿಗೆ ಗೊತ್ತಾಗುತ್ತದೆ.


ಪಟ್ಟಕುರುಗುಂದದ ಕುಪ್ಪೆಯಗೆರೆಗೆ ದೇಯಬ್ಬೆ ರಾಣಿಯು ಎಂಟು ಮತ್ತರು ಭೂಮಿಯನ್ನು ದಾನವಾಗಿತ್ತ ಸಂಗತಿಯನ್ನು ತಿಳಿಸುವುದು ಶಾಸನದ ಮುಖ್ಯೋದ್ಧೇಶ. ಕೆರೆಯ ವರ್ಣನೆ ಮತ್ತು ದಾನದ ಹಿರಿಮೆಗಳು ಪ್ರೌಢವಾದ ಕನ್ನಡಗದ್ಯದಲ್ಲಿವೆ. ಕೊನೆಯಲ್ಲಿ ೬ ಕಂದಪದ್ಯಗಳಿವೆ. ‘ಹರಚರಣ ಸರಸಿಜಾರ್ಚಿತೆ’ಯಾದ ದೇಯಬ್ಬೆಗೆ ‘ದಾನವ್ಯಸನಮೆ ಪರಮ ವ್ಯಸನ’ವಾಗಿತ್ತೆಂದು ಶಾಸನ ಹೇಳುತ್ತದೆ.

No comments:

Post a Comment