ಜಾನಪದದಲ್ಲಿ ಕದ್ರಿ
ಸಾಮಾನ್ಯವಾಗಿ ಎಲ್ಲಾ ಕ್ಷೇತ್ರ – ದೇವಾಲಯಗಳ ಬಗೆಗೂ ಅವುಗಳದ್ದೇ ಆದ ಜಾನಪದ ಹುಟ್ಟಿಕೊಂಡಿರುತ್ತದೆ. ಅಂಥ ಜಾನಪದವು ಐತಿಹ್ಯ – ಪುರಾಣ, ಆಚರಣೆ, ನಂಬಿಕೆ – ನಿಷೇಧಗಳ ರೂಪದಲ್ಲಿರುತ್ತದೆ. ಕದ್ರಿಗೆ ಸಂಬಂಧಿಸಿದಂತೆಯೂ ಈ ರೀತಿಯ ಹತ್ತು ಹಲವು ಜಾನಪದ ಸಂಗತಿಗಳು ಪ್ರಚಲಿತವಿವೆ. ಅವುಗಳ ಹರಹು ಪುರಾಣ ಪುರುಷ ಪರಶುರಾಮನಿಂದ ಹಿಡಿದು ದೀಪ ಹಚ್ಚುವ ಆಳಿನ ವರೆಗೂ ವ್ಯಾಪಿಸಿದೆ.
ಕದ್ರಿಯೂ ಸೇರಿದಂತೆ ಈ ಕರಾವಳಿ ಭೂಪ್ರದೇಶವು ಪರಶುರಾಮ ಸೃಷ್ಟಿಯ ಪ್ರದೇಶವೆಂಬ ಐತಿಹ್ಯವು ಜನಜನಿತವಾಗಿದೆ. ಕದ್ರಿಗೇ ವಿಶಿಷ್ಟವಾಗಿ ಪರಶುರಾಮ ಸೃಷ್ಟಿಯ ಐತಿಹ್ಯ ಪ್ರಚಲಿತವಿರುವುದನ್ನು ನಾವು ಕಾಣುತ್ತೇವೆ. ಅಲ್ಲಿನ ಜೋಗಿ ಮಠದ ಎದುರುಗಡೆಯ ಬಯಲಿನಲ್ಲಿ “ಪರಶುರಾಮನ ಕಟ್ಟೆ” ಎಂದು ಕರೆಯಲಾಗುವ ಕಟ್ಟೆಯೊಂದಿದೆ. ಅಲ್ಲಿ ನಿಂತು ಪರಶುರಾಮನು ತನ್ನ ಬೆರಳ ಸಂಕೇತ ಮಾತ್ರದಿಂದ ಸಾಗರವನ್ನು ಹಿಂದಕ್ಕೆ ಸರಿಸಿದನೆಂದು ಹೇಳಲಾಗುತ್ತದೆ. ಅದರ ನೆನಪಿಗೆಂಬಂತೆ ಈಗಲೂ ‘ರಾಜರು’ (ಮಠಾಧಿಪತಿಗಳು) ವರ್ಷಕ್ಕೊಮ್ಮೆ ಬ್ಯಾಂಡು – ವಾಲಗದೊಂದಿಗೆ ಸಮುದ್ರಪೂಜೆಗೆ ಹೋಗುವ ಪರಿಪಾಠವಿದೆ.
ಕದ್ರಿ ಗುಡ್ಡದಲ್ಲಿರುವ ಜೋಗಿಮಠದ (ಪೀಠದ) ಮೊದಲ ಗುರು ಪರಶುರಾಮನೆಂಬ ನಂಬಿಕೆ ಅಲ್ಲಿನ ಮಠಾಧಿಪತಿಗಳಲ್ಲಿದೆ. ಆತನು ಅಲ್ಲಿ ೧೨ ವರ್ಷಗಳ ಕಾಲ ಯೋಗವನ್ನಾಚರಿಸಿದನೆಂದು ಹೇಳಲಾಗುತ್ತದೆ. ಅವರ ನಂಬಿಕೆಯ ಪ್ರಕಾರ ಅವನು ಸ್ಥಾಪಿಸಿದ ಯಜ್ಞಕುಂಡವನ್ನೇ ಇಂದು ‘ಪರಶುರಾಮ ಧುನಿ’ ಎಂದು ಕರೆಯಲಾಗುತ್ತದೆ. ಹನ್ನೆರಡು ವರ್ಷಗಳಿಗೊಮ್ಮೆ ನಾಥ ಪಂಥದ ಮಠಗಳಿಗೆ ನೂತನ ಸನ್ಯಾಸಿ (ಮಠಾಧಿಪತಿ)ಗಳನ್ನು ನೇಮಿಸುವ ವಿಶಿಷ್ಟ ಕಾರ್ಯಕ್ರಮವೊಂದು ನಡೆಯುತ್ತದೆ. ನೂರಾರು ಸಾಧು – ಸಂತರಿಂದೊಡಗೂಡಿದ ‘ಝಂಡಿ’ ಎಂದು ಕರೆಯಲಾಗುವ ಕೂಟವೊಂದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ತ್ಯ್ರಂಬಕೇಶ್ವರದಿಂದ ಹೊರಡುತ್ತದೆ. ಆ ‘ಝಂಡಿ’ಯು ಕದ್ರಿಗೂ ಬಂದು ಮಠಾಧಿಪತಿಗಳನ್ನು ನೇಮಿಸಿ ಹೋಗುತ್ತದೆ. ಇದರ ಪ್ರವರ್ತಕನು ಪರಶುರಾಮನಾದುದರಿಂದ ಇದನ್ನು ‘ಪರಶುರಾಮ ಝಂಡಿ’ಯೆಂದು ಕರೆಯಲಾಗುತ್ತದೆಂಬುದು ಅಲ್ಲಿನ ಮಠದ ಯೋಗಿಗಳ ಅಭಿಮತ. ಒಟ್ಟಿನಲ್ಲಿ ಪುರಾಣ ಪ್ರಸಿದ್ಧ ಪರಶುರಾಮನಿಗೂ ಕದ್ರಿಯ ಜೋಗಿಮಠಕ್ಕೂ ಸಂಬಂಧ ಕಲ್ಪಿಸುವ ಪ್ರವೃತ್ತಿಯನ್ನು ನಾವಿಲ್ಲಿ ಕಾಣಬಹುದಾಗಿದೆ.
ಕದ್ರಿಗುಡ್ಡದಲ್ಲಿ ಜೋಗಿಮಠವಿದ್ದರೆ ಕೆಳಗಡೆ ಮಂಜುನಾಥ ದೇವಾಲಯವಿದೆ. ಆ ದೇವಾಲಯದ ಎದುರುಗಡೆ ಸುಮಾರು ೩೫ ಅಡಿ ಎತ್ತರದ ಅದ್ಭುತವಾದ ಲೋಹ ನಿರ್ಮಿತ ದೀಪ ಸ್ತಂಭವೊಂದಿದೆ. ಅದರಲ್ಲಿ ಮೇಲಿಂದ ಕೆಳಗಿನ ತನಕ ಸಾಲು ಸಾಲಾಗಿ ದೀಪಗಳನ್ನು ಬೆಳಗಿಸಬಹುದಾಗಿದೆ. ಇದರ ಬಗ್ಗೆ ಐತಿಹ್ಯವೊಂದು ಪ್ರಚಲಿತವಿದೆ. ಹಿಂದೆ ದೇವಸ್ಥಾನದ ಲಕ್ಷ ದೀಪೋತ್ಸವ ಸಂದರ್ಭದಲ್ಲೊಮ್ಮೆ ಅದಕ್ಕೆ ಎಣ್ಣೆಹಾಕಿ ಬತ್ತಿ ಜೋಡಿಸಿದ ಕೆಲಸಗಾರನು ಮೇಲಿನಿಂದ ಹಚ್ಚಿಕೊಂಡು ಇಳಿಯುವುದರ ಬದಲು ಕೆಳಗಿನಿಂದ ದೀಪ ಹಚ್ಚುತ್ತಾ ಮೇಲೇರಿದನಂತೆ. ಕೊನೆಗೆ ಅಡಿಭಾಗದ ದೀಪದ ಕುಡಿಗಳ ಕಾವನ್ನು ತಾಳಲಾರದೆ ಅಲ್ಲಿನ ತೀರ್ಥ ಕುಂಡವೊಂದಕ್ಕೆ ಹಾರಿ, ಅಲ್ಲೇ ಕಲ್ಲಾಗಿ ಹೋದನಂತೆ. ಇದನ್ನು ಅರಿತವರು ಅರ್ಥಾತ್ ಈ ಐತಿಹ್ಯದ ಬಗ್ಗೆ ನಂಬಿಕೆಯುಳ್ಳವರು ಇಂದಿಗೂ ಆ ಕುಂಡದಲ್ಲಿ ಸ್ನಾನ ಮಾಡುವುದಿಲ್ಲ.
ಮಂಜುನಾಥ ದೇವಾಲಯದ ಲಿಂಗ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆಯೂ ಐತಿಹ್ಯವೊಂದನ್ನು ಹೇಳಲಾಗುತ್ತದೆ. ನಾಥಪಂಥದ ಪ್ರವರ್ತಕ ಶ್ರೇಷ್ಠನಾದ ಮತ್ಸ್ಯೇಂದೆರನಾಥನು ಅಲ್ಲಿ ಮಂಜುನಾಥನನ್ನು ಪ್ರತಿಷ್ಠಾಪಿಸಬೇಕೆಂದು ಲಿಂಗವನ್ನು ತರಲು ತನ್ನ ಶಿಷ್ಯರನ್ನು ಕಾಶೀ ಕ್ಷೇತ್ರಕ್ಕೆ ಕಳುಹಿಸಿಕೊಟ್ಟನಂತೆ. ಆದರೆ ಅದೇ ವೇಳೆಗೆ ಶಿವನು ಆತನಿಗೆ ಕನಸಿನಲ್ಲಿ ‘ಕಾಣಿಸಿಕೊಂಡು ನಾನು ಕದಲಿಯ ರಸ ರೂಪದಲ್ಲಿ ಲಿಂಗಸ್ವರೂಪಿಯಾಗಿದ್ದೇನೆ; ಪ್ರತಿಷ್ಠಾಪಿಸಿ ಆರಾಧಿಸು’ ಎಂದು ಸೂಚಿಸಿದನಂತೆ. ಅದೇ ರೀತಿ ಪ್ರತಿಷ್ಠಾಪನಾ ಕಾರ್ಯ ನೆರವೇರಿತಂತೆ. ಶಿಷ್ಯರು ಕಾಶಿಯಿಂದ ತಂದ ಲಿಂಗವನ್ನು ನವತಟಾಕಗಳ ಪೈಕಿ ಒಂದರಲ್ಲಿ ನೆಲೆಗೊಳಿಸಿದರಮತೆ. ಅದನ್ನೇ ಕಾಲಾಂತರದಲ್ಲಿ ಅಣ್ಣಪ್ಪ (ದೈವ)ನು ವಾದಿರಾಜರ ಪ್ರೇರಣೆಯಂತೆ ಧರ್ಮಸ್ಥಳಕ್ಕೆ ಕೊಂಡೊಯ್ದನೆಂದು ಇನ್ನೊಂದು ಸ್ಥಳಪುರಾಣ ವಿವರಿಸುತ್ತದೆ.
ಕದ್ರಿಯ ಶಿವಲಿಂಗಕ್ಕೆ ‘ಮಂಜುನಾಥ’ ಎಂಬ ಹೆಸರು ಬಂದುದಕ್ಕೆ ಸ್ಥಳೀಯ ಜನಪದರು ಬೇರೆಯದೆ ಆದ ವಿವರಣೆಯನ್ನು ಕೊಡುತ್ತಾರೆ. ಹಿಂದೆ ಇಲ್ಲಿ ‘ಮಂಜು’ ಎಂಬ ಜೋಗಿ (ಸನ್ಯಾಸಿ)ಯೊಬ್ಬನಿದ್ದ. ಅವನು ಅಸುನೀಗಿದಾಗ ಅಲ್ಲೇ ಆತನನ್ನು ಸಮಾಧಿ ಮಾಡಲಾಯಿತು. ನಂತರದಲ್ಲಿ ಅದೇ ಸಮಾಧಿಯನ್ನು ಮಂಜುನಾಥ ದೇವರಾಗಿ ಆರಾಧಿಸಲಾಯಿತು. ಕಾಲಕ್ರಮದಲ್ಲಿ ಅಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಲಾಯಿತು. ಇತ್ಯಾದಿ ವಿವರಗಳನ್ನು ಅವರು ನೀಡುತ್ತಾರೆ. ಮತ್ಸ್ಯೇಂದ್ರನಾಥನೆಂಬ ನಾಥಪಂಥದ ಯೋಗಿ ಶ್ರೇಷ್ಠನ ಹೆಸರೇ ಜನಪದರ ಬಾಯಲ್ಲಿ ಮಚ್ಚೇಂದ್ರನಾಥ (ಮಚ್ಚೀಂದ್ರ ನಾಥ) ಎಂದಾಗಿ ಕಾಲಕ್ರಮದಲ್ಲಿ ‘ಮಂಜಿನಾಥ’ (ಮಂಜುನಾಥ) ರೂಪವನ್ನು ಪಡೆದಿರಬೇಕೆಂಬ ಕೆಲವು ವಿದ್ವಾಂಸರ ಅಭಿಪ್ರಾಯಕ್ಕೂ ಸ್ಥಳೀಯ ಜನಪದರು ನೀಡುವ ವಿವರಣೆಗೂ ಒಂದು ರೀತಿಯ ಸಂಬಂಧವಿದೆಯೆಂದು ತೋರುತ್ತದೆ. ಆದರೆ ಗೋವಿಂದ ಪೈಗಳಂತಹ ಹಿರಿಯ ಸಂಶೋಧಕರು ಬೋಧಿಸತ್ವನಾದ ಮಂಜುಶ್ರೀ ಅಥವಾ ಮಂಜು ಘೋಷನಿಂದಲಾಗಿ ಕದ್ರಿಯ ಶಿವಲಿಂಗಕ್ಕೆ ‘ಮಂಜುನಾಥ’ ಎಂಬ ಹೆಸರು ಬಂದಿದೆಯೆಂಬ ಚರ್ಚೆಯನ್ನು ಮುಂದಿಡುತ್ತಾರೆ
[1](ಗೋ.ಸಂ.ಸಂ.ಪು. ೬೬೩)
ಬಹುತೇಕ ಧಾರ್ಮಿಕ ಕ್ಷೇತ್ರ ಅಥವಾ ದೇವಾಲಯಗಳಿಗೆ ಸಂಬಂಧಿಸಿದಂತೆ ಅವುಗಳದ್ದೇ ಆದ ವಿಶಿಷ್ಟ ಸ್ಥಳ ಪುರಾಣಗಳೂ ಹುಟ್ಟಿಕೊಂಡಿರುತ್ತವೆ. ಇಂತಹ ಸ್ಥಳಪುರಾಣಗಳನ್ನು ಜಾನಪದದೊಳಗಡೆ ಸಮಾವೇಶಗೊಳಿಸುವ ಬಗೆಗೆ ಗೊಂದಲವಿದೆಯಾದರೂ ಅಭಿಜಾತ ಸಾಹಿತ್ಯ ಅಲ್ಲವೆಂಬ ಕಾರಣಕ್ಕಾಗಿ ಅವುಗಳನ್ನಿಲ್ಲಿ ಪ್ರಸ್ತಾಪಿಸಬಹುದಾಗಿದೆ[2]’. ಕದ್ರಿಗೆ ಸಂಬಂಧಿಸಿದಂತೆಯೂ ಈ ಬಗೆಯ ಸ್ಥಳಪುರಾಣ ಪ್ರಚಲಿತವಿದೆ. ಅದನ್ನು ಸ್ಥಳ ಮಹಾತ್ಮೆ, ಕ್ಷೇತ್ರಮಹಾತ್ಮೆ ಮುಂತಾದ ಹೆಸರುಗಳಿಂದಲೂ ಕರೆಯಲಾಗುತ್ತದೆ. “ಭಾರದ್ವಾಜ ಸಂಹಿತೆ”, “ಗೋರಕ್ಷಪದ್ಧತಿ” ಗಳಂತಹ ಸಂಸ್ಕೃತ ಗ್ರಂಥಗಳಲ್ಲಿ ಕದ್ರಿಗೆ ಸಂಬಂಧಿಸಿದ ಸ್ಥಳಪುರಾಣಗಳು ಸೇರ್ಪಡೆಯಾಗಿವೆ. ಇಲ್ಲಿಯ ಸ್ಥಳಪುರಾಣವನ್ನಾಧರಿಸಿ “ಕದ್ರಿಕ್ಷೇತ್ರ ಮಹಾತ್ಮೆ”ಯೆಂಬ ಯಕ್ಷಗಾನ ಪ್ರಸಂಗವೂ ರಚನೆಯಾಗಿ ಪ್ರದರ್ಶನಗೊಳ್ಳುತ್ತಿದೆ [3].
ಸ್ವತಃ ಕದ್ರಿಯ ಸ್ಥಳಪುರಾಣದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳ ಪುರಾಣಗಳಲ್ಲೂ ಕದ್ರಿಯ ಉಲ್ಲೇಖ ಬರುತ್ತದೆ. ಅಂತಹ ಉಲ್ಲೇಖವೊಂದನ್ನು ಎಂ. ಗೋವಿಂದ ಪೈ ಅವರು ತಮ್ಮ “ಕದಿರೆಯ ಮಂಜುನಾಥ” ಎಂಬ ಲೇಖನದಲ್ಲಿ ಕೊಡುತ್ತಾರೆ. (ಗೋ. ಸಂ.ಸಂ.ಪು ೬೫೯) ಅದರಂತೆ ತುಳು ನಾಡಿನ ಮಂಜೇಶ್ವರದ ಸ್ಥಳಪುರಾಣವಾದ “ಮಂಜುಳ ಕ್ಷೇತ್ರ ಮಹಾತ್ಮ್ಯ” (ಸಂಸ್ಕೃತ)ದ ೧ನೆಯ ಮತ್ತು ಮೂರನೆಯ ಅಧ್ಯಾಯಗಳಲ್ಲಿ ವಿರೂಪಾಕ್ಷನೆಂಬ ದಾಕ್ಷಿಣಾತ್ಯ ಸಾರಸ್ವತ ಬ್ರಾಹ್ಮಣನೊಬ್ಬನು ಗೋವೆಯಿಂದ ಹೊರಟು ದಕ್ಷಿಣಾಭಿಮುಖವಾಗಿ ತೀರ್ಥಾಟನೆ ನಡೆಸುವ ವಿವರಣೆ ಬರುತ್ತದೆ. ಆತನು ರಾಮೇಶ್ವರಕ್ಕೆ ಹೋಗುತ್ತಿದ್ದ ದಾರಿಯಲ್ಲಿ ಕದಿರೆಗೆ ಹೋಗಿ, ಕದಿಳೀವನ ನಾಯಕನಾದ ಶಂಕರ ಅಥವಾ ಮಂಜುನಾಥನನ್ನು ಪೂಜಿಸಿ, ಅಲ್ಲಿಂದ ಮಂಗಳೂರಿನ ನೇತ್ರಾವತಿ ನದೀ ತೀರಕ್ಕೆ ಹೋದುದಾಗಿ ಅಲ್ಲಿ ವಿವರಿಸಲಾಗಿದೆ.
ಸದಾಶಿವರಾಯರು
ಸದಾಶಿವರಾಯರ ಒಂದು ಮಾತು ನೆನಪಾಗುತ್ತದೆ. ‘ವ್ಯವಹಾರಕ್ಕೆ ಜಾತಿ ಇಲ್ಲ; ವ್ಯಭಿಚಾರಕ್ಕೆ ಜಾತಿ ಇಲ್ಲ. ಆದರೆ ರಾಜಕೀಯಕ್ಕೆ ಯಾಕೆ ಜಾತಿ ಬಂತು? ಹೇಳಿ’. ಗಾಂಧೀಜಿಯ ತತ್ವಗಳಲ್ಲಿ ನಿಷ್ಠೆಯುಳ್ಳವರಾಗಿ, ಬ್ರಿಟಿಷರ ವಿರುದ್ಧ ಸತ್ಯಾಗ್ರಹದಲ್ಲಿ ಜೈಲಿಗೆ ಹೋದವರೆಲ್ಲ ಜನನಾಯಕರು ಎಂದು ತಿಳಿದಿದ್ದ ಕಾಲ ಮಾಯವಾಗಲು ಶುರುವಾದ ಕಾಲದ ಮಾತು ಇದು. ಅಂದರೆ-ಅದು ಚುನಾವಣೆಗಳಲ್ಲಿ ಜಾತಿ ಮುಖ್ಯವಾಗತೊಡಗಿದ್ದ ಕಾಲ. ಜನತಂತ್ರದಲ್ಲಿ ಅಧಿಕಾರ ಹಿಡಿಯಲು ಗಾಂಧಿ ತತ್ವಾನುನಿಷ್ಠೆ ಮಾತ್ರ ಸಾಲದು ಎಂದು ನಿಷ್ಠುರವಾಗಿ, ಪ್ರಾಮಾಣಿಕವಾಗಿ ತಿಳಿಯಲು ಬಹಳ ಕಾಲ ಬೇಕಾಯಿತು. ತಮಾಷೆಯೆಂದರೆ ಯಾರೂ ಹೀಗೆಂದು ಹೇಳುತ್ತಿರಲಿಲ್ಲ; ಅದನ್ನೊಂದು ಸತ್ಯವಾಗಿ ಕಂಡು ವೈಚಾರಿಕವಾಗಿ ಚರ್ಚಿಸಿರಲಿಲ್ಲ. ಮಾತಿನಲ್ಲಿ ಏನೋ ಹೇಳಿ ಕ್ರಿಯೆಯಲ್ಲಿ ಇನ್ನೊಂದು ಬಗೆಯಲ್ಲಿ ವರ್ತಿಸಲು ತೊಡಗಿದ್ದ ಕಾಲ ಅದು. ‘ಹಿಪೋಕ್ರಸಿ’ ಹುಟ್ಟಿಕೊಳ್ಳುವುದು ಈ ಬಗೆಯ ಮನಸ್ಸಿನ ಸೋಮಾರಿತನದಿಂದಲೂ ಇರಬಹುದು. ಇರುವ ‘ಜಾತಿ’ ಸತ್ಯವನ್ನು ಕಂಡು, ಅದಕ್ಕೆ ಎದಿರಾಗಿ ಅದನ್ನು ಮೀರದೇ, ಅದನ್ನು ಗುಪ್ತವಾಗಿ ಬಳಸುವ ಹಿಪೋಕ್ರಸಿ ನಮ್ಮ ಜೀವನದಲ್ಲಿ ಪಾದಾರ್ಪಣೆ ಮಾಡಿದಂತೆ ಅನ್ನಿಸಿದ್ದರಿಂದ ಸದಾಶಿವರಾಯರಂತವರು ಸಿಟ್ಟಾಗಿದ್ದರು.
ಸದಾಶಿವರಾಯರು ಈ ಸಿಟ್ಟಿನಲ್ಲೇ ಮುಂದುವರೆದಿದ್ದರೆ, ಹಲವು ಬ್ರಾಹ್ಮಣ ವರ್ಗದ ಸ್ವಾತಂತ್ರ್ಯ ಹೋರಾಟಗಾರರಂತೆ ಇವರೂ ಜಾಣ ಸಿನಿಕರಾಗಿಬಿಡಬಹುದಿತ್ತು.
ಆದರೆ ಶಿವಮೊಗ್ಗ ಜಿಲ್ಲೆಯ ಪುಣ್ಯದಿಂದ ಅದು ತಪ್ಪಿತು. ಸದಾಶಿವರಾಯರು ಸದಾ ಗೊಣಗುವ-ಸತ್ಪ್ರಜೆಯಾಗಿ ಮಾತ್ರ ಉಳಿಯಲಿಲ್ಲ. ಜಿಲ್ಲೆಯ ಬಡ ರೈತರ ಸಮಸ್ಯೆ ಆಗಿನ ಕೆಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಮುಖ್ಯವಾಯಿತು. ತೀರಾ ಕೆಳವರ್ಗದವರಾಗಿ ‘ದೀವ’ ಜನಾಂಗದವರಿದ್ದರು ಒಕ್ಕಲಿಗರಲ್ಲೂ ಶ್ರೀಮಂತರೇ ಬೇರೆಯಾಗಿ ಬಡವರೇ ಬೇರೆಯಾಗಿ ಕಾಣತೊಡಗಿದ್ದರು. ಬ್ರಾಹ್ಮಣರಲ್ಲೂ ಬಡವರಿದ್ದರು. ಈ ಪ್ರಜ್ಞೆಯನ್ನು ತನ್ನದಾಗಿಸಿಕೊಂಡು ಶಾಂತವೇರಿ ಗೋಪಾಲಗೌಡರು ಬೆಳೆಯಲು ತೊಡಗಿದ್ದರು. ಗೋಪಾಲಗೌಡರಿಗೆ ಬೆಂಬಲವಾಗಿ ತೀರ್ಥಹಳ್ಳಿಯ ‘ಅಲೆಮಾರಿ’ ಕಾಂಗೈನ ರಾಘವೇಂದ್ರರಾಯರಿದ್ದರು.
ಲೋಹಿಯಾ ಒಂದು ಕಡೆ, ಬ್ರಾಹ್ಮಣರು ಕೆಳಜಾತಿಯವರನ್ನು ಪೋಷಿಸುವ ಗೊಬ್ಬರವಾಗಬೇಕು ಎಂದು ಹೇಳಿದ್ದಾರೆ. ಸದಾಶಿವರಾಯರು ಬೆಳೆಯುತ್ತಿದ್ದ ಶಾಂತವೇರಿ ಗೋಪಾಲಗೌಡರ ಬುಡವನ್ನು ಭದ್ರಮಾಡುವ ಗೊಬ್ಬರವಾದರು. ಶಾಂತವೇರಿ ಮೊದಲ ಬಾರಿಗೆ ಶಾಸಕಾಂಗದ ಸದಸ್ಯರಾದಾಗ ಎಲ್ಲ ಕಾನೂನು ಪುಸ್ತಕಗಳನ್ನು ಓದಿ ಅವರಿಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಿಕೊಡುತ್ತಿದ್ದವರು ಸದಾಶಿವರಾಯರು. ಹಾಗೆಯೇ ತನ್ನ ಪ್ರತಿ ತಿಂಗಳ ವರಮಾನದಲ್ಲಿ ಬಹುದೊಡ್ಡ ಪಾಲನ್ನು ಗೋಪಾಲಗೌಡರು ನೇರವಾಗಿ ಸದಾಶಿವರಾಯರ ಮನೆಗೆ ಹೋಗಿ ಅವರ ಹೆಂಡತಿಗೆ ಕೊಟ್ಟು ಬರುತ್ತಿದ್ದರು.
ಸದಾಶಿವರಾಯರದು ಶಿಸ್ತಿನ ಚಿಂತನೆ, ಗೋಪಾಲಗೌಡರದು ಸೃಜನಶೀಲ ಮುಕ್ತಚಿಂತನೆ. ಇಬ್ಬರೂ ಒಬ್ಬರಿಗೊಬ್ಬರು ಪೂರಕವಾದರು. ಸದಾಶಿವರಾಯರು ಜಾತಿಯ ರಾಜಕಾರಣಕ್ಕೆ ವಿರೋಧಿಗಳಾಗಿ ಮಾತಾಡುತ್ತಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ಬಡವರಾದ ಬ್ರಾಹ್ಮಣರು, ದೀವರು, ಒಕ್ಕಲಿಗರಿಗೆ ಗೋಪಾಲಗೌಡ ನಾಯಕರಾಗಿ ಬೆಳೆಯಬೇಕೆಂದು ಆಶಿಸಿದ್ದರು. ಹೀಗಾಗಿ ಅವರು ನಂಬಿದ ಸಮಾಜವಾದೀ ಚಿಂತನೆಗಳಿಗೆ ಕೆಳವರ್ಗದಿಂದಲೂ, ಕೆಳಜಾತಿಯಿಂದಲೂ, ಬಂದವರೊಬ್ಬರು ನಾಯಕರಾದ್ದರಿಂದ ಅಮೂರ್ತ ತತ್ವಕ್ಕೆ ಮಣ್ಣಿನಲ್ಲಿ ಊರಿದ ಬೇರುಗಳು ಸಿಗುವಂತಾಯಿತು.
ಸದಾಶಿವರಾಯರಿಗೆ ತೀರ್ಥಹಳ್ಳಿಯಲ್ಲಿ ಬೆಂಬಲ ಸಿಕ್ಕೀತೆಂದು ಮೊದಲ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸಲಾಗಿತ್ತು. ಇವರ ವಿರುದ್ಧ ಕಾಂಗ್ರೆಸ್ಸಿನಿಂದ ನಿಂತವರು ಕಡಿದಾಳ್ ಮಂಜಪ್ಪಗೌಡರು. ಇನ್ನೊಬ್ಬ ಅಭ್ಯರ್ಥಿ ಸದಾಶಿವರಾಯರ ಹತ್ತಿರದ ನೆಂಟರಾದ ಕಾಸರವಳ್ಳಿ ಸಾಹುಕಾರರು, ಜನಸಂಘದ ಅಭ್ಯರ್ಥಿ ಅವರು. ಗೋಪಾಲಗೌಡರು ನಿಂತಿದ್ದು ಸಾಗರದಿಂದ. ಆಗ ಇಂಟರ್ ಮೀಡಿಯೇಟ್ ಮುಗಿಸಿದ್ದ ನಾನು ಹಳ್ಳಿ ಹಳ್ಳಿ ತಿರುಗಿ ಸದಾಶಿವರಾಯರಿಗಾಗಿ ಪ್ರಚಾರ ಮಾಡಿದ್ದೆ. ಎಳ್ಳಮಾವಾಸ್ಯೆ ಜಾತ್ರೆಯಲ್ಲಂತೂ ತೀರ್ಥಹಳ್ಳಿ ಚೌಕದ ಮಹಡಿ ಮೇಲೊಂದು ಮೈಕ್ ಇಟ್ಟುಕೊಂಡು ನಾನು ಸತತವಾಗಿ ಭಾಷಣ ಬಿಗಿಯುತ್ತಿದ್ದೆ. ನನ್ನ ಪಕ್ಕದಲ್ಲಿ ಸಮಾಜವಾದಿ ಗೆಳೆಯ ಸಿನ್ಹಾ ಕೂತು ನನಗೆ ಕಿವಿಯಲ್ಲಿ ಹಲವು ವಿಚಾರಗಳನ್ನು ಪಿಸುಗುಟ್ಟಿ ಹೇಳಿ-ನನ್ನಿಂದ, ಬಳಸಿ ಮಾತಾಡಿಸುತ್ತಿದ್ದರು. ನನಗಿನ್ನೂ ನೆನಪಿದೆ-ಸತತವಾಗಿ ನಾನು ಹೇಳುತ್ತಿದ್ದ ಒಂದು ಮಾತು ಇದು: ‘ಸದಾಶಿವರಾಯರಿಗೇ ಓಟು ಕೊಡಿ; ಒಂದೊಮ್ಮೆ ನೀವು ಕೊಡಲು ಇಚ್ಛಿಸದಿದ್ದರೆ, ಕಾಂಗ್ರೆಸ್ನ ಕಡಿದಾಳ್ರಿಗೆ ಕೊಡಿ. ಆದರೆ ಜನಸಂಘಕ್ಕೆ ಮಾತ್ರ ಕೊಡಬೇಡಿ’.
ಹೀಗೆ ಭಾಷಣ ಮಾಡುತ್ತಾ ಅಲೆದಾಡಿದ ನಾನು ಒಮ್ಮೆ ಕಾಸರವಳ್ಳಿಯಲ್ಲಿ ಜ್ವರ ಬಂದು ರಾಮಕೃಷ್ಣರಾಯರ ಮನೆಯಲ್ಲೇ ಮಲಗಬೇಕಾಯಿತು. ಅಲ್ಲಿಯೂ ಸಿಕ್ಕ ಆಳು ಕಾಳುಗಳಿಗೆ ನನ್ನ ‘ಸಂದೇಶ’ವನ್ನು ಮುಜುಗರವಿಲ್ಲದೆ ಮುಟ್ಟಿಸುತ್ತಿದ್ದೆ. ಜೊತೆಗೇ ಸಾಹುಕಾರರ ಮನೆಯವರ ಅಪಾರವಾದ ಔದಾರ್ಯದ ಚಿಕಿತ್ಸೆಯನ್ನು ಪಡೆದಿದ್ದೆ. ಈ ಬಗೆಯ ನಿಚ್ಚಳವಾದ ಮುಜುಗರವಿಲ್ಲದ ತತ್ವ ನಿಷ್ಠೆಯನ್ನು ಆ ಎಳೆಯ ವಯಸ್ಸಿನಲ್ಲಿ ನಾನು ಪಡೆದದ್ದು ಸದಾಶಿವರಾಯರು, ಗೋಪಾಲಗೌಡರು-ಇಂಥವರ ಸಹವಾಸದಿಂದ.
ಅದೇ ಒಂದು ಕಾಲ!-ಎಂದು ಉದ್ಗರಿಸುವ ಆ ಕಾಲದ ನೆನಪಿರುವ ಕೆಲವೇ ಕೆಲವು ಜನ ಈಗ ಉಳಿದಿದ್ದಾರೆ. ಇವರೆಲ್ಲರೂ ಸದಾಶಿವರಾಯರ ರಾಜಕೀಯ ಸರಿ ತಪ್ಪುಗಳನ್ನು ನಿಷ್ಠುರವಾಗಿ ಗಂಟೆಗಟ್ಟಲೆ ಸದಾಶಿವರಾಯರ ಜೊತೆಯೇ ಚರ್ಚಿಸಿದ್ದಾರೆ. ಸಮಾಜವಾದಿ ಪಕ್ಷ ಪಿ.ಎಸ್.ಪಿ. ಜೊತೆ ವಿಲೀನವಾಗಬೇಕೆಂಬ ನಿರ್ಣಯವನ್ನು ಸದಾಶಿವರಾಯರು ಬೆಂಗಳೂರಿನಲ್ಲಿ ತೆಗೆದುಕೊಂಡು ಶಿವಮೊಗ್ಗೆಗೆ ಬಂದ ದಿನ ನೆನಪಾಗುತ್ತದೆ. ನಾವೆಲ್ಲರೂ ಸದಾಶಿವರಾಯರ ಮೇಲೆ ಕಂಡ ಕಾರಿದೆವು. ಸದಾಶಿವರಾಯರು ಆಗಲೇ ಹೊಂದಾಣಿಕೆಯ ರಾಜಕೀಯ ಯಾಕೆ ಸಮಯೋಚಿತ ಎಂದು ವಾದಿಸಿದ್ದರು….
ಇಂಥ ವಾದ ವಿವಾದಗಳ ಸುಳಿಯಲ್ಲಿ ಬೆಳೆದ ಸಮಾಜವಾದಿ ಚಿಂತನೆ ಮತ್ತೆ ಶಿವಮೊಗ್ಗ ಜಿಲ್ಲೆಯಲ್ಲಿ ಜೀವಂತವಾಗಬೇಕೆಂದು ನನ್ನ ಆಸೆ. ತನ್ನ ಎಲ್ಲ ಆಸ್ತಿಯನ್ನು ಕಳೆದುಕೊಂಡು, ಜೀವನ ಸಂತೋಷ ಕಳೆದುಕೊಳ್ಳದೆ ಜನರ ನಡುವೆ ಬದುಕಿದ ಸದಾಶಿವರಾಯರನ್ನು ಅವರ ಎಲ್ಲ ಇತಿಮಿತಿಗಳಲ್ಲೂ ಅರಿಯವುದು ಅಗತ್ಯ. ಇಂಥ ಅಪ್ಪಟ ವ್ಯಕ್ತಿಗಳನ್ನು ಪಡೆದುಕೊಂಡಿದ್ದ ಒಂದು ಪಕ್ಷ ಯಾಕೆ ಬೆಳೆಯಲಿಲ್ಲ? ಸಂಘಟನೆಯ ಶಿಸ್ತಿಗೆ ಒಗ್ಗದ ನಮ್ಮ ಸಮಾಜವಾದಿಗಳು ಕೇವಲ ಅನಾರ್ಕಿಸ್ಟರೇ?
ಸದಾ ನಗುವ ಕಣ್ಣುಗಳ ಸದಾಶಿವರಾಯರು ಚುರುಕಾದ ಮಾತಿನವರು. ಹಾಸ್ಯ ಪ್ರಜ್ಞೆ ಇದ್ದೂ ಪ್ರೀತಿ, ಜಗಳಗಂಟತನ ಸಿಟ್ಟುಗಳಲ್ಲಿ ತೊಳಲಾಡಿದವರು. ಜೇಬಿನಲ್ಲಿರುವ ಹಣ ತೀರುವ ತನಕ ಹಿಂದಿನ ಸಾಹುಕಾರಿಕೆಯ ಗತ್ತಿನಲ್ಲಿ ಉದಾರಿಗಳಾಗುತ್ತಿದ್ದರು. ಇದು ತನ್ನದು ಎಂಬ ವ್ಯಾಮೋಹವಿಲ್ಲದೇ ಬದುಕಿದವರು. ತನ್ನಂತವರ ಅಗತ್ಯವಿಲ್ಲದಂತೆ ಬೆಳೆಯ ತೊಡಗಿದ. ರಾಜಕೀಯ ವ್ಯವಸ್ಥೆಯಿಂದ ದಿಗ್ಭ್ರಾಂತರಾದ ನನ್ನ ಪ್ರೀತಿಯ ಹಿರಿಯರಲ್ಲಿ ಒಬ್ಬರು.
ಕೃಪೆ: ಕಾಗೋಡು ಸತ್ಯಾಗ್ರಹಗಳ ಪರಿಚಯದ ಪುಸ್ತಕಮಾಲೆ
ಗುಬ್ಬಿಗ ಜಿ.ಸದಾಶಿವರಾವ್–ಒಂದು ನೆನಪು
ಸಂ: ಕಲ್ಲೂರು ಮೇಘರಾಜ
ಪ್ರ: ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ೨೦೦೪
ಝಂಡಿ
ಭಾರತದ ವಿವಿಧೆಡೆಗಳಲ್ಲಿ ನಾಥ ಪಂಥೀಯ ಮಠಗಳಿವೆ. ಅವುಗಳಿಗೆ ಸಂಬಂಧಿಸಿದ ‘ಬಾರಹ್ ಪಂಥ್’ ಯೋಗಿ ಮಹಾಸಭಾದ ಪ್ರಮುಖ ಕಾರ್ಯಾಲಯವು ಹರಿದ್ವಾರದಲ್ಲಿದೆ. ಪ್ರತಿ ೧೨ ವರ್ಷಗಳಿಗೊಮ್ಮೆ ಆ ಮಠಗಳಿಗೆ ನೂತನ ಸನ್ಯಾಸಿಗಳನ್ನು ನಿಯುಕ್ತಿಗೊಳಿಸುವ ವಿಶಿಷ್ಟ ಕಾರ್ಯಕ್ರಮವೊಂದು ನಡೆಯುತ್ತದೆ. ನೂರಾರು ಸಾಧುಸಂತರಿಂದೊಡಗೂಡಿದ “ಝಂಡಿ” ಎಂದು ಕರೆಯಲಾಗುವ ಕೂಟವೊಂದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ತ್ಯ್ರಂಬಕೇಶ್ವರದಿಂದ ಹೊರಡುತ್ತದೆ. ಗುರುವು ಸಿಂಹರಾಶಿಯನ್ನು ಪ್ರವೇಶಿಸುವಾಗ ತ್ಯ್ರಂಬಕೇಶ್ವರದ್ಲಿ ‘ಕುಂಭಮೇಳವು ನಡೆಯುತ್ತದೆ.
[1]ಆಗ ನಾಥ ಪಂಥದ ಸತ್ಯನಾಥಿ, ರಾಮನಾಥಿ, ಧರ್ಮನಾಥಿ, ಪಾವನಾಥಿ, ಪಾಗಲನಾಥಿ, ರಾವಲನಾಥಿ, ಕಪಲಾನಿ, ಗಂಗಾನಾಥಿ, ನಟೇಶ್ವರಿ, ಆಯಿಪಂಥಿ, ಬೈರಾಗಿ, ಮನ್ನಾಥಿ ಎಂಬ ಹನ್ನೆರಡು ಕವಲುಗಳಿಗೆ ಸೇರಿದ ‘ಬಾರಹಪಂಥಿ’ ಸಾಧುಗಳು – ಅವಧೂತ ಯೋಗಿಗಳು ಅಲ್ಲಿ ಒಗ್ಗೂಡುತ್ತಾರೆ. ಕುಂಭಮೇಳವು ಮುಗಿದು ನಾಗಪಂಚಮಿಯು ಕಾಲಿಟ್ಟೊಡನೆ ಝಂಡಿಯು ತನ್ನ ಪಾದಯಾತ್ರೆಯನ್ನು ಪ್ರಾರಂಭಿಸುತ್ತದೆ. ಆ ಝಂಡಿಯ ಪ್ರವರ್ತಕನು ಪರಶುರಾಮನೆಂಬ ನಂಬಿಕೆ ನಾಥಯೋಗಿಗಳಲ್ಲಿದೆ. ಆದುದರಿಂದ ಅದನ್ನು ‘ಪರಶುರಾಮ ಝಂಡಿ’ ಯೆಂದು ಕರೆಯುತ್ತಾರೆ.
ಕದ್ರಿ ಮಠವನ್ನು ತಲುಪಲು ಆ ಝಂಡಿಯು ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಒಟ್ಟು ೧೧೬೦ ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸುತ್ತದೆ. ಮೊದಲೇ ನಿಶ್ಚಿತವಾದ ಊರುಗಳಲ್ಲಿ ಮೊಕ್ಕಾಂ ಹೂಡುತ್ತಾ ಅದು ತನ್ನ ಪಾದಯಾತ್ರೆಯನ್ನು ಮುಂದುವರಿಸುತ್ತದೆ. ತಮ್ಮ ಮಠಗಳು ಸಿಕ್ಕಿದಾಗ ಝಂಡಿಯು ಅಲ್ಲಿಗೆ ಹೊಸ ಸ್ವಾಮಿಗಳನ್ನು (ಪೀಠಾಧಿಪತಿಗಳನ್ನು) ನೇಮಿಸಿ, ಅಧಿಕಾರ ಪತ್ರವನ್ನು ಕೊಟ್ಟು ಹಳೆಯ ಪೀಠಾಧಿಪತಿಗಳನ್ನು ತನ್ನಕೂಟಕ್ಕೆ ಕೂಡಿಸಿಕೊಳ್ಳುತ್ತದೆ. ಬಹಳ ಸಮರ್ಥರಿದ್ದರೆ ಅವರನ್ನೇ ಪುನರ್ ನೇಮಕ ಮಾಡುತ್ತದೆ. ಪೀಠಾಧಿಪತಿಗಳಾಗುವವರು ಪಾತ್ರದೇವತೆಯನ್ನು ಕೈಯಲ್ಲಿ ಹಿಡಿದಿರುತ್ತಾರೆ. ಅವರು ಎಲ್ಲಿಯೂ ಅದನ್ನು ನೆಲದ ಮೇಲಿಡದೆ ಬರಿಗಾಲಲ್ಲಿ ಸಾಗಬೇಕು. ಕಾಲಿಗೆ ಮುಳ್ಳು ಚುಚ್ಚಿದರೆ ಬೇರೋಬ್ಬರು ಬಂದು ತೆಗೆಯಬೇಕು. ಮಠಗಳಿರುವಲ್ಲಿ ಮೂರು ನಾಲ್ಕು ದಿನ ನಿಲ್ಲುತ್ತಾ, ಮಠಗಳಿಲ್ಲದೆಡೆಗಳಲ್ಲಿ ಏಕರಾತ್ರಿ ಮಾತ್ರ ತಂಗುತ್ತಾ ೯೦ ಠಿಕಾಣಿಗಳನ್ನು ದಾಟಿ ಒಟ್ಟು ಏಳು ತಿಂಗಳು ಪ್ರಯಾಣ ಮಾಡಿ ಝಂಡಿಯು ಕದ್ರಿಯನ್ನು ಬಂದು ತಲುಪುತ್ತದೆ. ಝಂಡಿಯು ತಂಗುವೆಡೆಗಳಲ್ಲಿ ಅದರ ಸದಸ್ಯರ ಅನ್ನಪಾನಾದಿಗಳಿಗೆ ಭಕ್ತರು ಸಹಾಯ ಮಾಡುತ್ತಾರೆ. ಅನ್ಯರು ಅಟ್ಟುದನ್ನು ಸಂತರು ಉಣ್ಣುವುದಿಲ್ಲ. ಒಣಜೀನಸು (ಕಚ್ಚಾ ಪದಾರ್ಥ)ಗಳನ್ನು ಪಡೆದುಕೊಂಡು ತಾವೇ ಬೇಕಾದ್ದನ್ನು ಸಿದ್ಧಪಡಿಸಿಕೊಂಡು ಉಣ್ಣುತ್ತಾರೆ. ಝಂಡಿಯ ಮೇಲಸ್ತುವಾರಿಯನ್ನು ಕೊಠಾರಿ, ಕಾರುಭಾರಿ, ಪಂಚರು, ಭಂಡಾರಿಗಳು, ಮಹಂತರು ಮುಂತಾದ ೩೨ ಜನ ಪದಾಧಿಕಾರಿಗಳು ನೋಡಿಕೊಳ್ಳುತ್ತಾರೆ.
ಝಂಡಿಯ ಸದಸ್ಯರು ಗುಂಪು ಬಿಟ್ಟು ಹೋಗಬಾರದು; ಅಮಲು ಪದಾರ್ಥ ಸೇವಿಸಬಾರದು. ಭಂಗಿ ಮಾತ್ರ ಸೇವಿಸಬಹುದು. ಯೋಗಿಯೊಬ್ಬ ನಡುವೆ ಮೃತನಾದರೆ ಮುಂದಿನ ಮಠದ ವರೆಗೆ ಒಯ್ದು ಸಮಾಧಿ ಮಾಡುತ್ತಾರೆ. ಕದ್ರಿಯನ್ನು ತಲುಪುವ ಹೊತ್ತಿಗೆ ೧೭ ಮಠಗಳು ಸಿಗುತ್ತವೆ. ಯಾವ್ಯಾವ ಮಠಕ್ಕೆ ಯಾವ್ಯಾವ ಪಂಗಡದವರು ಪೀಠಾಧಿಪತಿಗಳಾಗಬೇಕೆಂಬ ಬಗ್ಗೆ ನಾಥಪಂಥೀಯರಲ್ಲಿ ಪುರಾತನ ಪದ್ಧತಿಯೊಂದಿದೆ.
ಅದರಂತೆ ದಕ್ಷಿಣಕನ್ನಡದ ವಿಟ್ಲ ಮಠದಲ್ಲಿ ಸತ್ಯನಾಥ ಪಂಥದವರೂ ಹಲವರಿ ಮಠದಲ್ಲಿ ಧರ್ಮನಾಥ ಪಂಥದವರೂ ಪೀಠವೇರುತ್ತಾರೆ. ಕದ್ರಿ ಪೀಠವು ದಕ್ಷಿಣದ ಎಲ್ಲ ಪೀಠಗಳಿಗಿಂತ ಸರ್ವೋನ್ನತವಾದುದೆಂದು ಹೇಳಲಾಗುತ್ತದೆ. ಆದುದರಿಂದಲೇ ಅದನ್ನು ರಾಜಪೀಠವೆನ್ನುತ್ತಾರೆ. ಅದಕ್ಕೆ ಕಪಲಾನಿ, ಗಂಗಾನಾಥಿ, ನಟೇಶ್ವರಿ, ಬಯರಾಗಿ ಈ ಯಾವುದೇ ಪಂಥದವರೂ ಪೀಠಾಧಿಪತಿಗಳಾಗಬಹುದು. ಪ್ರಕೃತ ಅಲ್ಲಿ ಕಪಲಾನಿ ಶಾಖೆಗೆ ಸೇರಿದ ಮೋಹನನಾಥಜೀಯವರು ಪೀಠಾಧಿಪತಿಗಳಾಗಿದ್ದಾರೆ. ಕದ್ರಿ ಮಠದ ಎದುರಿಗಿರುವ ಶಿಲಾಪೀಠದ ಮೇಲೆ ಪೀಠಾಧಿಪತಿಗಳನ್ನು ಕುಳ್ಳಿರಿಸಿ ಬ್ರಾಹ್ಮಣ ತಂತ್ರಿ – ಪುರೋಹಿತರಿಂದ[2] ಅಭಿಷೇಕಪೂರ್ವಕವಾದ ರಾಜಪಟ್ಟಾಭಿಷೇಕವನ್ನು ವೈಭವದಿಂದ ನೆರವೇರಿಸುತ್ತಾರೆ. ಕದ್ರಿಯಲ್ಲಿ ಪಟ್ಟಾಭಿಷೇಕವು ನೆರವೇರಿದ ಮೇಲೆ ಝಂಡಿಯನ್ನು ವಿಸರ್ಜಿಸಲಾಗುತ್ತದೆ. ಭಕ್ತರಿಂದ ಅದುವರೆಗೆ ಲಭಿಸಿದ ಕಾಣಿಕೆಗಳನ್ನು ಅವರಿಗೆಲ್ಲಾ ಹಂಚಿ ಬಿಡುತ್ತಾರೆ. ಆ ಸಾಧುಗಳು ತೀರ್ಥಯಾತ್ರೆ ಮಾಡುತ್ತಾ ತಮತಮಗೆ ತೋರಿದ ಬಗೆಗಳಲ್ಲಿ ತಂತಮ್ಮ ನೆಲೆಗಳನ್ನು ಸೇರಿಕೊಳ್ಳುತ್ತಾರೆ. ಝಂಡಿಯು ಹೊರಟಾಗ ಸುಮಾರು ೬೦೦ ಮಂದಿ ಸಾಧುಗಳಿರುತ್ತಾರೆ. ಸಾಮಾನ್ಯವಾಗಿ ನಾಸಿಕದವರೆಗೆ ಎಲ್ಲರೂ ಬರುತ್ತಾರೆ. ಅಲ್ಲಿಂದ ಮುಂದಕ್ಕೆ ತಮ್ಮ ಕೈಲಾದಷ್ಟು ದೂರ ಬಂದು ಒಂದಷ್ಟು ಜನ ಕಳಚಿಕೊಳ್ಳುತ್ತಾರೆ.
ಇತ್ತೀಚಿಗೆ ೧೯೯೨ರಲ್ಲಿ ಕದ್ರಿಗೆ ಝಂಡಿಯು ಬಂದಿತ್ತು. ಕದ್ರಿಯನ್ನು ತಲುಪುವಾಗ ಅದರಲ್ಲಿ ೩೨೫ ಮಂದಿ ಸಾಧುಗಳಿದ್ದರು. ಕಾಲಭೈರವನ ಉಪಾಸಕರಾದ ಅವರು ಆತನ ವಾಹನವಾದ ಕಪ್ಪುನಾಯಿಯೊಂದನ್ನು ತಮ್ಮೊಡನೆ ಕರೆತಂದಿದ್ದರು. ಮಠಕ್ಕೆ ಪ್ರದಕ್ಷಿಣೆ ಬರುವ ಸಂದರ್ಭದಲ್ಲಿ ಆ ನಾಯಿಯನ್ನು ಪುಷ್ಟಮಾಲಿಕೆಯಿಂದ ಅಲಂಕರಿಸಿ ಮುಂಚೂಣಿಯಲ್ಲಿ ನಡೆಸುತ್ತಿದ್ದರು. ಅಖಿಲ ಭಾರತ ಬಾರಹಪಂಥದ ಪ್ರಮುಖರೂ, ಲೋಕಸಭಾ ಸದಸ್ಯರೂ ಆಗಿದ್ದ ಮಹಂತ ಅವೈದ್ಯನಾಥಜೀಯವರು ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಿಂದಿನ ಪೀಠಾಧಿಪತಿಗಳಾಗಿದ್ದ ಸೋಮನಾಥಜೀಯವರಿಂದ ನೂತನ ಪೀಠಾಧಿಪತಿಗಳಾದ ಮೋಹನನಾಥಜೀಯವರು ಪಟ್ಟದ ಕತ್ತಿಯನ್ನು ಸ್ವೀಕರಿಸಿದರು. ವಿಟ್ಲ ಮಠದ ಲಾಲನಾಥಜೀಯವರಿಗೂ ಕದ್ರಿ ಮಠದಲ್ಲಿಯೇ ಪಟ್ಟವಾಯಿತು.
ಈಗಾಗಲೇ ನಾವು ಗಮನಿಸಿರುವಂತೆ ಕದ್ರಿಯ ಜೋಗಿ ಅರಸರು ಉತ್ತರ ಭಾರತದವರಾದ್ದರಿಂದ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಅವರು ಹಿಂದಿಯಲ್ಲೇ ವ್ಯವಹರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಜನರ ಸಂಪರ್ಕದಿಂದಾಗಿ ಅಲ್ಪಸ್ವಲ್ಪ ಕನ್ನಡ ಕಲಿತಿದ್ದಾರೆ. ಮಠಾಧಿಪತಿಗಳಾಗಲಿ, ಅವರ ಶಿಷ್ಯರಾಗಲಿ ಭಿಕ್ಷಾಟನೆಗೆ ಹೋಗುವುದಿಲ್ಲ. ಪಾದಕಾಣಿಕೆಯಾಗಿ ಬಂದ ಪದಾರ್ಥಗಳಿಂದಲೇ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಾರೆ. ಅವರು ಶುದ್ಧ ಶಾಖಾಹಾರಿಗಳು. ಅವರೇ ಹೇಳುವ ಪ್ರಕಾರ ಸ್ಥಳೀಯ ‘ಜೋಗಿ’ ಸಮಾಜದವರು ಅವರ ಶಿಷ್ಯರು. ಅವರು ಮಠಕ್ಕೆ ಬಂದು ಶಿಷ್ಯ ದೀಕ್ಷೆ ಪಡೆಯುತ್ತಾರೆ. ನವದಂಪತಿಗಳಾದವರು ಮಠಕ್ಕೆ ಬಂದು ಪಾದಕಾಣಿಕೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ. ಸನ್ಯಾಸದೀಕ್ಷೆ ಪಡೆಯಲಿರುವವರು ಮೊದಲು ಮಠಾಧಿಪತಿಗಳ ಶಿಷ್ಯರಾಗಿ ಮಠದಲ್ಲಿರುತ್ತಾರೆ. ಅವರಿಗೆ ಪ್ರಾರಂಭದಲ್ಲೇ ಕರ್ಣಛೇಧನ ಮಾಡಿಸಿ ಅದರೊಳಗೆ ಮಣ್ಣಿನ ಉಂಡೆಯನ್ನು ಕೂರಿಸುತ್ತಾರೆ. ಈ ಧಾರ್ಮಿಕ ವಿಧಿಯನ್ನು ‘ಕನ್ ಫಟ್’ ಎನ್ನುತ್ತಾರೆ. ಕಿವಿಯ ತೂತು ದೊಡ್ಡದಾಗಿ ಜೋತು ಬಿದ್ದ ಮೇಲೆ ಮಣ್ಣಿನ ಉಂಡೆಯನ್ನು ತೆಗೆದು ಮೃಣ್ಮಯ ಕುಂಡಲವನ್ನು ತೊಡಿಸುತ್ತಾರೆ. ಹೀಗೆ ಮಾಡುವುದರಿಂದ ಕಾಮತೃಷ್ಣೆ ತಗ್ಗುತ್ತದೆ; ಕುಂಡಲಿನಿ ಶಕ್ತಿ ಬೇಗೆ ಜಾಗೃತವಾಗುತ್ತದೆ ಎಂಬ ನಂಬಿಕೆ ಮಠದ ಸಾಧುಗಳಲ್ಲಿರುತ್ತದೆ. ಶಿಷ್ಯರಾದವರು ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯಿಂದ ಮಾಡಿದ ‘ಸಿಂಗನಾದ’ (ಸಿಂಗಿನಾದ) ಎಂಬ ತುತ್ತೂರಿಯೊಂದನ್ನು ತಮ್ಮ ಕೊರಳಲ್ಲಿ ತೂಗುಹಾಕಿ ಕೊಂಡಿರುತ್ತಾರೆ. ಊಟಕ್ಕೆ ಮೊದಲು ದೇವರನ್ನು ಪ್ರಾರ್ಥಿಸಿ ಅದನ್ನು ಊದುತ್ತಾರೆ.
No comments:
Post a Comment